आनॊभद्रा: कृतवॊ यन्तु विश्वत:

ಮ೦ಗಳಮಯವಾದ ವಿಷಯಗಳು ಎಲ್ಲಿ೦ದ ಬ೦ದರೂ ಸ್ವೀಕರಿಸಬೇಕು.

Friday 15 January 2016

ಸಂಕ್ರಾಂತಿ ಕೇವಲ ಆಚರಣೆಯಲ್ಲ! ಅದು ಬದಲಾವಣೆಯ ಸಂಧಿಕಾಲ...

      ಸಂಕ್ರಾಂತಿ ಶಬ್ದವನ್ನು ನಾವು ಸರಿಯಾಗಿ ಗಮನಿಸಿರುವುದೇ ಇಲ್ಲ. ಕ್ರಾಂತಿ ಎನ್ನುವ ಪದ ಅದರಲ್ಲಿ ಹುದುಗಿದೆ. ಕ್ರಾಂತಿ ಎಂದರೆ ಬದಲಾವಣೆ ಎಂದರ್ಥ. ಸಂಕ್ರಾಂತಿ ಹಬ್ಬವನ್ನು ಸೂರ್ಯ ಮಕರ ರಾಶಿಯನ್ನು ಪ್ರವೇಶಿಸಿದಾಗ ಆಚರಿಸುವ ಹಬ್ಬವೆಂದಷ್ಟೇ ಕೆಲವರಿಗೆ ತಿಳಿದಿದೆ. ಆದರೆ ಅದರಿಂದ ಯಾವ ಕ್ರಾಂತಿಯಾಯಿತು ಎಂದು ಯಾರೂ ಪ್ರಶ್ನಿಸುವ ಗೋಜಿಗೇ ಹೋಗುವುದಿಲ್ಲ. ಸೂರ್ಯ ಸುಮಾರು 30 ದಿನಗಳಿಗೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗುತ್ತಾನೆ, ಆದರೆ ಈ ರಾಶಿಗಳ ಬದಲಾವಣೆಯನ್ನು ಹಬ್ಬವೆಂದು ಆಚರಿಸುವುದಿಲ್ಲ.

      ಸೂರ್ಯನ ಕರ್ಕ ರಾಶಿ ಪ್ರವೇಶ ಮತ್ತು ಮಕರ ರಾಶಿ ಪ್ರವೇಶಕ್ಕೆ ವಿಶೇಷ ಮಹತ್ವ ಕೊಟ್ಟರೂ ವಿಜೃಂಭಣೆಯಿಂದ ಹಬ್ಬವನ್ನಾಚರಿಸುವುದು ಮಕರ ಸಂಕ್ರಮಣಕ್ಕೇ. ಕಾರಣ ಹಲವಾರಿವೆ. ಇಂದಿನಿಂದ ಸೂರ್ಯ ಜಾಸ್ತಿ ಬೆಳಗುತ್ತಾನೆ. ಸಂಕ್ರಾಂತಿಯ ನಂತರದ ಬದಲಾವಣೆ ಕೇವಲ ಖಗೋಳದಲ್ಲಿ ಮಾತ್ರವಲ್ಲ ಅದು ಭೂಮಿಯಲ್ಲೇ ಹೆಚ್ಚು. ನಾಲ್ಕು ಗೋಡೆಗಳ ಮಧ್ಯೆ ಕೆಲಸಮಾಡುವ ಹಾಗು ನಾಲ್ಕು ಗೋಡೆಗಳಿಂದ ಹೊರಗೇ ಬಾರದೆ ಬದುಕುವವರಿಗೆ ಈ ಬದಲಾವಣೆ ಅರಿವಿಗೆ ಬಾರದು.

      ಸನಾತನ ಧರ್ಮದ ಹಬ್ಬಗಳು ಸುಮ್ಮನೆ ಯಾವುದೋ ಒಂದು ಕ್ಯಾಲೆಂಡರ್ ದಿನಾಂಕದಂದು ಆಚರಿಸುವ ಆಚರಣೆಯಾಗದೆ ವೈಜ್ಞಾನಿಕ ಹಾಗು ಪ್ರಾಕೃತಿಕ ನಂಟನ್ನು ಹೊಂದಿರುತ್ತವೆ ಎಂಬುದಕ್ಕೆ ಸಾಕ್ಷಿ ರೂಪವಾಗಿ ಸಂಕ್ರಾಂತಿ ನಿಲ್ಲುತ್ತದೆ.

      ಭೂಮಿಯನ್ನು ಜಡವಾಗಿ ಕಾಣುತ್ತಿದ್ದ ಪ್ರಪಂಚಕ್ಕೆ ತಾಯಿಯಂತೆ ಭಾವನಾತ್ಮಕವಾಗಿ ನೋಡಲು ಕಲಿಸಿದ್ದು ಭಾರತೀಯರು. ಭೂಮಿಯನ್ನು ತಾಯಿಯೆಂಬ ಪೂಜನೀಯ ಭಾವದಿಂದ ಕಾಣುವ ದೃಷ್ಟಿ ಇಲ್ಲಿಯ ಸಂಸ್ಕೃತಿಯಲ್ಲಿದೆ. ಅದರಲ್ಲಿಯೂ ಸಂಕ್ರಾಂತಿಯ ವಿಷಯಕ್ಕೆ ಬಂದಾಗ ನನಗೊಬ್ಬ ಚಿಂತಕರು ಹೇಳಿದ ಮಾತುಗಳು ಈಗಲೂ ಕಿವಿಯಲ್ಲಿ ಗುನುಗುತ್ತಿವೆ.

      "ಭೂಮಿ ನಮ್ಮ ತಾಯಿ ಅಂದಮೇಲೆ ಅವಳಿಗೂ ನಮ್ಮ ಹಾಗೆಯೇ ಜೀವವಿರಬೇಕಲ್ಲಾ. ನಮ್ಮ ಹಾಗೆಯೇ ಅವಳೂ ಕೂಡ ಉಸಿರಾಡುತ್ತಾಳೆ. ನಮಗೆ ಹೇಗೆ ಉಚ್ಛ್ವಾಸ ನಿಃಶ್ವಾಸಗಳಿವೆಯೋ ಅವಳಿಗೂ ಕೂಡ ಉಚ್ಛ್ವಾಸ ನಿಃಶ್ವಾಸಗಳಿವೆ. ಅದೇ ಉತ್ತರಾಯಣ & ದಕ್ಷಿಣಾಯಣ. ಅರ್ಥಾತ್ ಮಕರ ಸಂಕ್ರಾಂತಿ & ಕರ್ಕ ಸಂಕ್ರಾಂತಿ. ಉತ್ತರಾಯಣ ಅರ್ಥಾತ್ ಏರುವುದು ಉಚ್ಛ್ವಾಸ ಹಾಗು ದಕ್ಷಿಣಾಯಣ ಅರ್ಥಾತ್ ಇಳಿಯುವುದು  ನಿಃಶ್ವಾಸ."

      ಈ ವಿವರಣೆ ಕೇವಲ ಭಾವನಾತ್ಮಕವೆಂದು ಅನ್ನಿಸುವುದು.ಆದರೆ ಇದರ ಹಿಂದಿರುವ ವೈಜ್ಞಾನಿಕ ಸಂಭವತೆಯನ್ನು ತರ್ಕಿಸಿದಾಗ ಮಾತ್ರ ತಿಳಿಯುವುದು. ಉಸಿರನ್ನು ಎಳೆದುಕೊಂಡಾಗ ರಕ್ತ ಸಂಚಲನೆಯ ಮೂಲಕ ಶಕ್ತಿ ಪ್ರತಿಯೊಂದು ಜೀವಕೋಶಗಳಿಗೂ ತಲುಪುತ್ತದೆ. ಹಾಗೆಯೇ ಉಸಿರನ್ನು ಹೊರಬಿಟ್ಟಾಗ ಶಕ್ತಿಯು ಕುಂದುತ್ತದೆ. ಇದು ವಿಜ್ಞಾನದ ಪಾಠ. ಇದೇ ಉಸಿರಾಟವನ್ನು ಭೂಮಿಗೆ ಹೋಲಿಸಿ. ಭೂಮಿಯ ಜೀವಕೋಶಗಳಾದ ಅರಣ್ಯ,ಸಸ್ಯ ಜಗತ್ತು ಹೂವು ಅರಳುವ ಮೂಲಕ, ಕಾಯಿ,ಹಣ್ಣುಗಳು ಬೆಳೆಯುವ ಮೂಲಕ ಭೂಮಿ ತನ್ನ ಜೀವಂತಿಕೆಯನ್ನು ಉತ್ತರಾಯಣ ಅರ್ಥಾತ್ ಜನವರಿ ತಿಂಗಳ ನಂತರ ತೊರ್ಪಡಿಸಲು ಪ್ರಾರಂಭಿಸುತ್ತದೆ. ಭೂಮಿಯ ಮೇಲಿನ ಸಕಲ ಜೀವಿಗಳೂ ಸರಪಳಿಯಲ್ಲಿ ಒಂದಕ್ಕೊಂದು  ಅವಲಂಬಿತವಾಗಿವೆ ಎನ್ನುವುದೂ ವಿಜ್ಞಾನ ಕಲಿಸಿದ ಪಾಠವೇ. ಈ ಎಲ್ಲ ಜೀವಿಗಳು  ಸಸ್ಯಜಗತ್ತನ್ನು ಅವಲಂಬಿಸಿರುವುದರಿಂದ ಸಂಕ್ರಾತಿಯ ಪರಿಣಾಮ ಜೀವಿಗಳ ಮೇಲೂ ಆಗುವುದು ಎನ್ನುವುದು ಸತ್ಯವೇ ಆಯಿತು. ಅಂದರೆ ಭೂಮಿಯ ಮೇಲೆ ಶಕ್ತಿ ಸಂಚಯವಾಗುವುದು ಈ ಸಮಯದಲ್ಲೇ ಎಂದಾದಮೇಲೆ ಅದು ಉಚ್ಛ್ವಾಸವಾಯಿತಲ್ಲವೇ.

      ಇನ್ನು ಉತ್ತರಾಯಣ ಪ್ರಾರಂಭವಾಗುವ ಹಿಂದಿನ ಸಮಯ ಅಂದರೆ ನವೆಂಬರ್ ಡಿಸೆಂಬರ್ ತಿಂಗಳಲ್ಲಿ ನೋಡಿದರೆ ಪ್ರಕೃತಿ ಬಂಜೆಯಂತೆ ಕಾಣುವುದು. ಎಲ್ಲೆಲ್ಲೂ ಎಲೆ ಉದುರಿರುವ ಬೋಳು ಗಿಡಮರಗಳು, ಹೂವು ಹಣ್ಣುಗಳಿಲ್ಲದೆ ನಿಸ್ಸತ್ವವಿಲ್ಲದ ಸಸ್ಯರಾಶಿಯನ್ನು ನೋಡಿದರೆ ತನ್ನೆಲ್ಲಾ ಜೀವವನ್ನು ಕಳೆದುಕೊಂಡಿದೆಯೇನೋ ಅನ್ನಿಸುವುದು. ಇದೇ ಭೂಮಿಯ ನಿಃಶ್ವಾಸವಲ್ಲವೇ. ಈ ಸಮಯದಲ್ಲಿ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಂಡಿರುತ್ತದೆ. ಭೂಮಿಯ ಫಲವತ್ತತೆ ಕಡಿಮೆಯಾದಾಗ ಎಳ್ಳನ್ನು ಬಿತ್ತಿ ಫಲವತ್ತತೆ ಹೆಚ್ಚಿಸುವ ಕ್ರಮ ಭಾರತದ ಕೃಷಿ ಪದ್ಧತಿಯಲ್ಲಿದೆ. ಇದೇ ಕಾರಣಕ್ಕಾಗಿಯೇ ಬೆಳೆದ ಎಳ್ಳನ್ನು ಸಂಕ್ರಾಂತಿಯ ದಿನದಂದು ಬಳಸುವುದರಿಂದ ಭೂಮಿಯ ಫಲವತ್ತತೆಯೂ ಹೆಚ್ಚಾಯಿತು, ಎಳ್ಳನ್ನು ತಿಂದು ದೇಹವೂ ಪುಷ್ಟಿಯಾಯಿತು. ಅಂತೂ ಸಂಕ್ರಾಂತಿ ಪ್ರಾಕೃತಿಕವಾಗಿ ಕ್ರಾಂತಿಯ ಆರಂಭದ ದಿನವಾಗಿ ನಿಲ್ಲುವುದು.

No comments:

Post a Comment